Tuesday 28 January 2014

ದೇವಯಾನಿ...



ನಿನ್ನದೇ ಚಿತ್ರ ತೂಗು ಹಾಕಿದ ಹೃದಯದ ತೀರಾ ಒಳಕೋಣೆಗೆ  ಕದವಿಕ್ಕಿ ಬರುತ್ತೇನಾದರೂ ಬೀಗ ಹಾಕಲು ಯಾಕೋ ಮನಸ್ಸಾಗುವುದಿಲ್ಲ. ಯಾಕೆಂದರೆ ನಿನ್ನ ನೆನಪುಗಳು ಬಂದಾಗ ಬೀಗ ತೆಗೆಯುವಷ್ಟೂ ತಾಳ್ಮೆಯಿರುವುದಿಲ್ಲ ನನ್ನಲ್ಲಿ. ಅಷ್ಟು ಧಾವಂತದಲ್ಲಿರುತ್ತೇನೆ ನಿನ್ನ ಮುಂದೆ ಮಂಡಿಯೂರಲು. ನೀನೊಂಥರ "ಗೆಳೆಯಾ ಎಂದರೆ ಅದಕೂ ಹತ್ತಿರ .. ಇನಿಯಾ ಎಂದರೆ ಅದಕೂ ಎತ್ತರ" .. ನಿನ್ನನ್ನು ಸಂಬೋಧಿಸಲು ಶಬ್ದಗಳಿಲ್ಲ, ಹಾಗಾಗಿ ಸಂಬಂಧಕ್ಕೊಂದು ಹೆಸರಿಡದೆಯೇ ಹಾಗೆ ಇದೆ.

ನಿನ್ನ ಪರಿಚಯ ಆಕಸ್ಮಿಕವೇನಲ್ಲ. ಕ್ಲಾಸ್ ಮೇಟ್ ಗಳಾಗಿದ್ದವರು ನಾವು. ಆದರೆ ಖಂಡಿತ ನಿನ್ನ ಮುಖ ಪರಿಚಯವಿರಲಿಲ್ಲ, ಯಾಕೆಂದರೆ ನೀ ಕ್ಲಾಸ್ ಕಡೆ ಮುಖ ಹಾಕಿದವನೇ ಅಲ್ಲವಲ್ಲ.  ಅವತ್ತೊಂದಿನ  ಯಾವುದೋ ಕಾದಂಬರಿ ಓದುತ್ತಾ ಕುಳಿತವಳ ಬಳಿ ಬಂದವನು, ನಾನು "ಪಿಆರ್" , ಶ್ರೀ ಮತ್ತು ಜಾನು ನಿನ್ನ ಬಗ್ಗೆ ಹೇಳ್ತಾ ಇರ್ತಾರೆ, ಅಂತ ಎದುರು ಬಂದಿದ್ದೆ. ನಿನ್ನ ಬಗ್ಗೆ ನನಗೂ ಕೇಳಿ ಗೊತ್ತಿತ್ತು ಆದ್ದರಿಂದ ನಾನು .. ಎಂದು ಶುರು ಮಾಡುವ ಮೊದಲೇ ನೀನೇ " ದೇವಯಾನಿ " ಎಂದಿದ್ದೆ. ನನ್ನ ಹೆಸರು ಅದಲ್ಲ ಎಂದವಳಿಗೆ  " ನಿನ್ನ ಕಿವಿ ಜುಮುಕಿ , ಕೆನ್ನೆ ತಾಕುವ ಕೂದಲುಗಳಿವೆಯಲ್ಲ ತುಂಬಾ ಇಷ್ಟವಾಯ್ತು ನಂಗೆ, ಅದ್ಯಾಕೋ ಯಯಾತಿಯಲ್ಲಿನ ದೇವಯಾನಿ ನೆನಪಾದಳು. ಇನ್ನೊಂದು ಏನು ಗೊತ್ತಾ ನನ್ನಮ್ಮನ ಹೆಸರು ಬಿಟ್ಟರೆ ಜಗತ್ತಿನಲ್ಲಿ ನಾನಿಷ್ಟ ಪಟ್ಟ ಇನ್ನೊಂದು ಹೆಸರು ದೇವಯಾನಿ. ನಿನ್ನ ನಿಜ ಹೆಸರು ಗೊತ್ತಿದ್ದರೂ ನಾ ನಿನಗೆ ದೇವಯಾನಿ ಎಂದೇ ಕರೆಯುತ್ತೇನೆ" ಎಂದಿದ್ದೆ. ಅವತ್ತಿನಿಂದ ನಿನಗೆ ನಾ ದೇವಯಾನಿಯೇ ಆಗಿದ್ದೆ. ಆದರೆ ನಾವಿಬ್ಬರೇ ಇದ್ದಾಗ ಮತ್ತು ಮೆಸೇಜ್ ಗಳಲ್ಲಿ ಮಾತ್ರ ನೀ ಹಾಗೆ ಕರೆಯುತ್ತಿದುದು. ಎಲ್ಲರೆದುರು ಎಲ್ಲರಂತೆ ನಿನಗೂ "ಚಂದು " ನಾನು. ಆಮೇಲೆ ಜಾನು , ಶ್ರೀ, ನಾನು , ರಾಘು, ವಸು, ನೀನು, ಪ್ರವಿ ಎಲ್ಲ ಒಂದು ಗ್ರೂಪ್ ಆಗಿಬಿಟ್ಟಿದ್ವಿ. ಕಾಲೇಜ್ ಕಾರಿಡಾರ್ ನಲ್ಲಿ ಕಾಣದೇ ಇದ್ದ ನೀವೆಲ್ಲ ಕಾಲೇಜ್ ಗೆ ಬರುತ್ತಿದ್ದೀರಿ. " ಮಗಾ ಎಗ್ಸಾಮ್ ಮಾತ್ರ ಅಟೆಂಡ್ ಮಾಡ್ತಾ ಇದ್ದ ನೀನು ಈಗೇನೋ ಇಷ್ಟೊಂದು ಕಾಲೇಜ್ ಕಡೆ ಬರ್ತೀಯ " ಅಂತಾ ರಾಘು ಕೇಳಿದರೆ "ದೇವಯಾನಿಗಾಗಿ " ಅಂತ ನೀ ತಣ್ಣಗೆ ಉತ್ತರಿಸಿದ್ದರೆ ಹಾವು ತುಳಿದಂತಾಗಿತ್ತು ನಂಗೆ. ಗಾಬರಿಯಲ್ಲಿ ನಿನ್ನ ಕಡೆ ನೋಡಿದರೆ ನಿನ್ನ ತುಂಟ ಕಣ್ಣುಗಳು ನನ್ನ ನೋಡಿ ನಗುತ್ತಿದ್ದವು. ನಮ್ಮನೆಲ್ಲ ನಿಮ್ಮ ಮನೆಗೆ ಕರೆದುಕೊಂಡು ಹೋದಾಗಲೂ ಅಷ್ಟೇ, ಎಲ್ಲರನ್ನೂ ನೀನೇ ಪರಿಚಯಿಸಿದ್ದರೂ, ನಿನ್ನಮ್ಮ ನನ್ನ ನೋಡಿದವರೇ ಚಂದು ಅಲ್ವಾ  ಗೊತ್ತು ಬಿಡು ಅಂದಾಗ  ಗಾಬರಿಯಾಗಿತ್ತು ನಂಗೆ. ನೀ ಎಲ್ಲರಿಗೂ ಮನೆ ತೋರಿಸುತ್ತಿದ್ದರೆ ನಿಮ್ಮಮ್ಮ ನನ್ನನ್ನು ಅವರ ಕೋಣೆಗೆ ಕರೆದೊಯ್ದಿದ್ದರು. ಅಲ್ಲಿ ಗೋಡೆಗಿದ್ದ ನನ್ನದೇ ದೊಡ್ಡ  ಫೋಟೋ ನಗುತ್ತಾ ನನ್ನನ್ನು ಸ್ವಾಗತಿಸಿದರೆ ವಿಸ್ಮಿತಳಾಗಿದ್ದೆ ನಾನು. ಅದು ಯಾವಾಗ ತೆಗೆದಿದ್ದು ಎಂದು ನಾನು ಯೋಚಿಸುತ್ತಿದ್ದರೆ ನಿಮ್ಮಮ್ಮ  " ನನ್ನ ಮಗ ಇಷ್ಟ ಪಟ್ಟ ಹುಡುಗಿ ನೀನು , ನೀವಿಬ್ಬರೂ ಸೇರುವ ದಾರಿಯೇ ದೂರವಿದೆ, ಸೇರಿದ ಮೇಲೆಯೂ ನಡೆವ ದಾರಿ ಇನ್ನೂ ದೂರದ್ದು. ಸಂಯಮವಿರಲಿ, ಎಚ್ಚರವಿರಲಿ" ಎಂದರು.  ನಿನ್ನಮ್ಮನ ಮಾತಿನಲ್ಲಿ ಪ್ರೀತಿಯ ಜೊತೆಗೆ ಎಚ್ಚರಿಕೆಯೂ ಇತ್ತು. 

ನೀನು ಯಾವತ್ತೂ ನೀನಾಗೆ ಪ್ರೀತಿ ಎಂದು ಬಂದವನಲ್ಲ. ನೀನಾಗಿಯೇ ಯಾವತ್ತೂ  ಪ್ರೀತಿಯನ್ನೂ ಹೇಳಿಕೊಳ್ಳಲೂ ಇಲ್ಲ. ಏಕಾಂತದಲ್ಲಿ ಮಾತಿಗೆ ಕರೆಯಲಿಲ್ಲ. ಏಕಾಂತದಲ್ಲಿ ಸಿಕ್ಕಾಗಲೂ ಕಾಡಲೂ ಇಲ್ಲ. ಶಟಲ್ ಆಡುವಾಗ ಎಲ್ಲರೆದುರೇ ದೇವಯಾನಿಯ ಬಗೆಗೆ ಕನಸುಗಳ ತೆರೆದಿಡುವಾಗ ಮನಸ್ಸೆಂಬೋ  ನವಿಲು ಗರಿ ಬಿಚ್ಚಿ ಕುಣಿಯುತ್ತಿತ್ತು. ಆದರೆ ತೋರಿಸಿಕೊಳ್ಳುವಂತಿರಲಿಲ್ಲ. ಪ್ರೀತಿ , ಪ್ರತಿಷ್ಠೆಯ ನಡುವಿನ ಜೂಜಾಟದಲ್ಲಿ ಪ್ರೀತಿಗೆ ಸೋಲು ಎಂಬುದು ಚೆನ್ನಾಗಿ ಗೊತ್ತಿತ್ತು ನನಗೆ. ನನಗಿಂತಲೂ ಗಟ್ಟಿಯಾದ  ಕನಸುಗಳು ನಿನಗಿದ್ದಾಗ ಅದನ್ನೆಲ್ಲ ಹಾಳು ಮಾಡುವ ಮನಸ್ಸಿರಲಿಲ್ಲ. ಅದಕ್ಕಾಗಿ  ಉತ್ತರದ ವಿಷಯದಲ್ಲಿ ನಾ ಮೌನಿಯಾಗಿದ್ದೆ. ನೀನು ಕೂಡ ಎಂದಿಗೂ ಉತ್ತರ ಕೊಡು ಎನ್ನುವಂತೆ ನನ್ನ ಕೇಳಿರಲೇ ಇಲ್ಲ. ಕಾಲೇಜ್ ಮುಗಿಯಿತು.  ಹೈಯರ್ ಸ್ಟಡಿಸ್ ಗಾಗಿ ಡೆಲ್ಲಿಗೆ ಹೋಗುವಾಗ ಮಾತ್ರ ನೀ ನನ್ನ ಕೇಳಿದ್ದೆ " ಏನು ಯೋಚಿಸಿದ್ದೀಯ ?" ಎಂದು. ಆ ಮುಸ್ಸಂಜೆಯಲ್ಲಿ ಸುಮ್ಮನೆ ನಿನ್ನ ಕೈ ಅದುಮಿ ಬಸ್ಸಿಂದ ಇಳಿದು ಬಂದವಳಲ್ಲಿ ಯಾವ ಭಾವನೆಗಳಿದ್ದವೋ ಇಂದಿಗೂ ಗೊತ್ತಿಲ್ಲ. ಅದನ್ನು ನೀನೇನೆಂದು ಅರ್ಥೈಸಿಕೊಂಡೆಯೋ ಅದೂ ಗೊತ್ತಿಲ್ಲ. ನಾನು ನನ್ನದೇ ಆದ ಹುಡುಕಾಟಗಳಲ್ಲಿ ಕಳೆದು ಹೋದರೆ ನೀ ನಿನ್ನ ಕನಸುಗಳಲ್ಲಿ ಕಳೆದು ಹೋದೆ. ಅದೆಷ್ಟೋ ತಿಂಗಳುಗಳು ಮಾತುಗಳಿಲ್ಲದೆ ಕಳೆದುಹೋಗಿದ್ದವು. ಅಪರೂಪಕ್ಕೆಲ್ಲೋ  ಮಾಡುವ ಕಾಲ್ ನಲ್ಲೂ ಕೂಡಾ ನಮ್ಮ ನಮ್ಮ ಕೆಲಸ , ಓದಿನ ಬಗ್ಗೆ ಮಾತುಗಳಿರುತ್ತಿದ್ದವು. ಈ ಹುಡುಗ "ದೇವಯಾನಿ" ಯನ್ನು ಮರೆತಿದ್ದಾನೆ ಎಂದುಕೊಂಡಿದ್ದೆ. ಆದರೆ ಕೊನೇ ಭೇಟಿಯಲ್ಲಿ ನೀನು " ಇನ್ನೊಂದೇ ಹೆಜ್ಜೆ ಕಣೆ ಗುರಿಗೆ, ಆಮೇಲೆ ಬಂದು ನನ್ನ ದೇವಯಾನಿಯನ್ನು ಕರೆದುಕೊಂಡು ಹೋಗುತ್ತೇನೆ " ಎಂದಾಗ ಅದೆಂಥ ಹುಚ್ಚು ಪ್ರೀತಿಯೋ ಹುಡುಗಾ ನಿನ್ನದು ಎನಿಸಿತ್ತು. ಆದರೆ ವಿಧಿ ಬೇರೆಯದಿತ್ತು ಬಿಡು. ವಾಪಸ್ ಹೋದವನು accident ಗೆ ಬಲಿಯಾಗಿದ್ದೆ. ಬರುತ್ತೇನೆ ಎಂದು ಹೇಳಿ ಹೋದವನು ಮರಳಿ ಬಾರದ ಲೋಕಕ್ಕೆ ಹೋಗಿದ್ದೆ. ಸೇರುವ ಮೊದಲೇ ದಾರಿ  ಮುರಿದು ಬಿದ್ದಿತ್ತು.  



ನಿನ್ನ ಸಾವಿನ ಸುದ್ದಿಯನ್ನು ಕೇಳಿದವಳು, ಅಮೇಲೇನನ್ನೂ ಯಾರ ಬಳಿಯೂ ಕೇಳಿಲ್ಲ. ನಿನ್ನ ಸಾವನ್ನು ಒಪ್ಪಿಕೊಳ್ಳಲು ಆಗಲೇ ಇಲ್ಲ ನನ್ನಿಂದ.  ಜಾನು , ಶ್ರೀ,ರಾಘು, ವಸು, ಪ್ರವಿ ನಿನ್ನ ನೆನಪು ಮಾಡಿಕೊಳ್ಳುತ್ತಾರೆ. ಆಗೆಲ್ಲ ನನಗೆ ಅಪರಾಧಿ ಪ್ರಜ್ಞೆ ಕಾಡುತ್ತೆ. ಆಗಲೇ ಒಪ್ಪಿಕೊಂಡು ಬಿಡಬೇಕಿತ್ತಾ ಎನಿಸುತ್ತದೆ. ಒಂದು ವೇಳೆ ಒಪ್ಪಿಕೊಂಡಿದ್ದರೆ ಇವತ್ತಿಗೆ ನನ್ನ ಬದುಕು ಏನಾಗುತ್ತಿತ್ತು ಎಂದು ಯೋಚನೆ ಬಂದರೆ ಸ್ವಾರ್ಥಿಯಾಗುತ್ತೇನೆ ನಾನು ಎನಿಸುತ್ತೆ. ಆದರೆ ಒಪ್ಪಿಕೊಂಡರೂ ಒಪ್ಪಿಕೊಳ್ಳದಿದ್ದರೂ ಅದು ವಾಸ್ತವ. ಮೊನ್ನೆ ನಿಮ್ಮ ಮನೆಗೆ ಹೋಗಿದ್ದೆ. " ಮುಕ್ತಾ ಮೇಡಂ ಮನೆ ಖಾಲಿ ಮಾಡಿದ್ದಾರಂತೆ, ಅಲ್ಲಿ ಬೇರೆ ಯಾರೋ ಬಾಡಿಗೆಗಿದ್ದಾರಂತೆ " ಅಂತ ವಸು ಹೇಳಿದ್ದರೂ ಆ ಮನೆಯ ಬಾಗಿಲು ಬಡಿದಿದ್ದೆ. ನಿಮ್ಮಮ್ಮನೆ ಬಾಗಿಲು ತೆಗೆದಾಗ ಖುಷಿಯಾಯ್ತು. ಅವತ್ತಿನದೇ ಪ್ರೀತಿಯಲ್ಲಿ ಬರಮಾಡಿಕೊಂಡರು. ನಿನ್ನ ಬಾಸ್ಕೆಟ್ ಬಾಲ್, ಸ್ಕೇಟಿಂಗ್ ಷೂಸ್, ಬುಕ್ಸ್ , ಬ್ಯಾಗ್ ಎಲ್ಲವು ಅದರದರದೇ ಸ್ಥಾನಗಳಲ್ಲಿದ್ದವು. ಗೋಡೆಯಲ್ಲಿ ನನ್ನ ಫೋಟೋ ಹಾಗೆಯೇ ನಗುತ್ತಿತ್ತು. ಅದರ ಎದುರಿನ ಗೋಡೆಯಲ್ಲಿ ನಿನ್ನ ಮೂರು ಫೋಟೋಗಳು ನನ್ನನ್ನು ನೋಡುತ್ತಿರುವಂತೆ.  ಅಲ್ಲಿ ನೋಡಿದವರಿಗೆ ನೀನಿಲ್ಲ ಎಂದು ಅನಿಸಲು ಸಾದ್ಯವೇ ಇರಲಿಲ್ಲ. ಅಲ್ಲಿ ನಿನ್ನ ಅಸ್ತಿತ್ವ  ನಿರಂತರ ಅನಿಸಿತು. ನಾವು ಮಾತನಾಡಿದೆವು ಎನ್ನುವುದಕ್ಕಿಂತ ತುಂಬಾ ಹೊತ್ತು ಮೌನದಿಂದ ಇದ್ದೆವು ಅಂದರೆ ಸರಿ ಆಗುತ್ತೆ. ಹೊರಡುವ ಮುಂಚೆ ನನ್ನ ಫೋಟೋ ತೋರಿಸಿ ನಿನ್ನ ಅಮ್ಮನನ್ನು ಕೇಳಿದೆ "ಈ ಫೋಟೋ ತೆಗೆದುಕೊಂಡು ಹೋಗಲಾ? ನಾನು"  ಅಂತ. ಅದಕ್ಕೆ ಅವರು ನಿನ್ನ ಫೋಟೋಗಳನ್ನು ತೋರಿಸಿ "ಆ ಫೋಟೋಗಳಲ್ಲಿ ಬೇಕಾದರೆ ಒಂದನ್ನು ತೆಗೆದುಕೋ. ಈ ಫೋಟೋ ನನ್ನ ಸೋಸೆಯದು, ಕೊಡೋಲ್ಲ " ಎಂದರು. ಓಡಿ ಹೋಗಿ ನಿಮ್ಮಮ್ಮನನ್ನು ತಬ್ಬಿಕೊಂಡೆ. ಅವರೂ ನನ್ನನ್ನು ಬಿಗಿಯಾಗಿ ತಬ್ಬಿಕೊಂಡರು. ಆ ಅಪ್ಪುಗೆಯಲ್ಲಿ ಬಹಳ ಮಾತುಗಳಿದ್ದವು. ಕೆಲವಷ್ಟು ಅರ್ಥವಾದವು, ಕೆಲವು ಆಗಲಿಲ್ಲ. ಅದರಲ್ಲಿ ನಿನಗೆ ಹೇಳಬೇಕಾಗಿದ್ದ ಮಾತುಗಳೆಷ್ಟಿದ್ದವೋ ???    

******************************************************************
ಸಂಭ್ರಮದ  ಎರಡು ವಸಂತಗಳು ಸಂಧ್ಯೆಯಂಗಳದಲ್ಲಿ ... 
ಎಲ್ಲರ ಪ್ರೀತಿಗೆ ಋಣಿ ... 

ಪ್ರೀತಿಯಿಂದ ....  ಸಂಧ್ಯೆ .... 

        

30 comments:

  1. ತುಂಬಾ ದಿನದ ನಂತರ...... ಸೂಪರ್ ಕತೆ.... narration ತುಂಬಾ ಇಷ್ಟ ಆತು...... fantastic :)

    ReplyDelete
  2. ಅಲ್ಲಾ ಸಂಧ್ಯಾ ಪುಟ್ಟಿ ಹೀಗೆ ನೀವು ಆಗಾಗ ಕಾಣೆಯಾಗುತ್ತಿದ್ದಾರೆ, ನಮ್ಮಂತಹ ಅಭಿಮಾನಿಗಳ ಪಾಡೇನು? ಅಂತೀನಿ...

    ಮನಮಿಡಿಯುವ ಬರಹ ಇದು.

    ReplyDelete
  3. ಛೇ ತುಂಬಾ ಬೇಜಾರಾಯ್ತು .... ಕಣ್ಣು ತೇವವಾಯ್ತು.... :( ತೀರಾ ಹತ್ತಿರದಿಂದ ಓದಿಸಿಕೊಂಡು ಹೋಯ್ತು..... ಅದ್ಭುತ ಬರಹ.....

    ReplyDelete
  4. very touching.... ishtavaaytu Sandy :)

    ReplyDelete
  5. ಸಂಧ್ಯಾ -
    ಶುಭಾಶಯಗಳು... ಸಂಧ್ಯೆಯಂಗಳದಲ್ಲಿ ಮತ್ತೆ ಮತ್ತೆ ವಸಂತವು ನಗಲಿ – ಅಂಕೆ, ಸಂಖ್ಯೆಗಳ ಲೆಕ್ಕ ತಪ್ಪುವಷ್ಟು – ನಿನ್ನ ಸಂಭ್ರಮ ನಿರಂತರವಾಗಲಿ...
    “ದೇವಯಾನಿ” ಕಾಡುತ್ತಿದ್ದಾಳೆ... ಚಂದದ ಬರಹ...

    ReplyDelete
  6. ಚೆಂದದ ಕಥೆ ಸಂಧ್ಯಾ, ಪ್ರೀತಿಗೆ ಸಾವಿಲ್ಲ ಎಂಬುದನ್ನು ತೋರಿಸಿದೆ. ಬ್ಲಾಗ್ ಹುಟ್ಟುಹಬ್ಬಕ್ಕೆ ಶುಭಾಶಯಗಳು.
    ಅಭಿನಂದನೆಗಳು

    ReplyDelete
  7. ನನ್ನ ಪ್ರೀತಿಯ ಸಂಧ್ಯೆ...
    ನಿನಗೆ ನೆನಪಿದೆಯಾ ನಮ್ಮಿಬ್ಬರ ಮೊದಲ ಬೇಟಿ..?
    ಮಬ್ಬುಗತ್ತಲ ಸಂಜೆಯ ದಾರಿಯಲ್ಲಿ ಅನಿರೀಕ್ಷಿತವಾಗಿ ಬೇಟಿಯಾಗಿದ್ದು, ಪಾರ್ಕಿನ ಮೂಲೆಯ ಒಂಟಿ ಕಲ್ಲುಬೆಂಚಿನಲ್ಲಿ ಜಂಟಿಯಾಗಿ ಕೂತು ಈ ದೇವಯಾನಿಯ ಬಗ್ಗೆ ಮಾತನಾಡಿದ್ದು.. . ?
    ಕಾಡುವ ನೋವುಗಳನ್ನು ಕೂಡ ನಾವು ಕೆಲವೊಮ್ಮೆ ಇನ್ನಿಲ್ಲದಂತೆ ಪ್ರೀತಿಸುತ್ತಿವಲ್ಲ.. ಹಾಗಾಗಿ ಈ ಭಾವಗಳು ಕೂಡ ನಮ್ಮ ಮನದಂಗಳದ ಭಾವ.. ಇಷ್ಟಕ್ಕೆ ಇಷ್ಟ. ಕಷ್ಟಕ್ಕೆ ಕಷ್ಟ..!
    ಇವತ್ತಿನವರೆಗೂ ಈ ಹೇಳಿದ ದೇವಯಾನಿ ಕಾಡುತ್ತಿದ್ದಾಳೆ..ಅವಳ ಬದುಕು ಹಸನಾಗಲಿ...

    ReplyDelete
    Replies
    1. ಬರಹದ ಗುಂಗಿನಲ್ಲಿ ಶುಭಾಶಯ ಹೇಳುವುದ ಮರೆತೇ..
      ಶುಭಾಶಯಗಳು ಸಂಧ್ಯಾ...

      Delete
  8. ಹೇ ಶರ್ಮಿಷ್ಟೆ!
    ತಾರ್ಕಿಕಾ ಬಹವಃ ಶಾಬ್ದಿಕಾಶ್ಚ ಸಹಸ್ರಶಃ ವಿರಲಾಃ ಸರಸಾಲಾಪಪೇಶಲಾಃ

    ReplyDelete
  9. barahakke enu heLabeko gottilla...shubhaashyagaLu

    ReplyDelete
  10. ತುಂಬಾ ಚೆನ್ನಾಗಿದೆ ಸಂಧ್ಯಾ .. ಅಭಿನಂದನೆಗಳು .

    ReplyDelete
  11. ಮನ ಮಿಡಿಯುವ ಕತೆ.

    ReplyDelete
  12. ಸಾವಿನ ಪ್ರಸ್ಥಾಪಕ್ಕಿಂತ!! ಕಡೆಯಲ್ಲಿ ಬರುವ ಸನ್ನಿವೇಶವೇ ತೀವ್ರವಾಗಿದೆ.
    ಕಥೆ ಚೆನ್ನಾಗಿದೆ.

    ReplyDelete
  13. ತುಂಬಾ ತುಂಬಾ ಚೆನ್ನಾಗಿದೆ,,,

    ReplyDelete
  14. ಪ್ರೀತಿಯ ಸಂಧ್ಯಕ್ಕ..
    ಓದ್ತಾ ಓದ್ತಾ ಯಾಕೋ ಹೃದಯವನ್ನು ತಟ್ಟಿತು....ತುಂಬಾ ಕಾಡುವಂತಿದೆ ಬರಹ...

    ReplyDelete
  15. ಈ ಕಥೆ ಯಾಕೋ ತುಂಬಾ ಮನಸ್ಸಿಗೆ ತಟ್ಟಿ ಬಿಡ್ತು ಕಣ್ರೀ... ಎಂಥ ಭಾವುಕ ಸನ್ನಿವೇಶ... ಪಾಪ ದೇವಯಾನಿಗೆ ಹೀಗಾಗಬಾರದಿತ್ತು ಅನ್ನಿಸಿತು!

    ReplyDelete
  16. ಇನ್ನಷ್ಟು ಮತ್ತಷ್ಟು ಸಂತಸ ಸಂಭ್ರಮದ ವಸಂತಗಳು ಸಂಧ್ಯೆಯಂಗಳದಲ್ಲಿ ಮೂಡಲಿ.. ಶುಭಾಶಯಗಳು..

    ReplyDelete
  17. ಮೊದಲನೆಯದಾಗಿ ಶುಭಾಶಯ ..... ಮುಂದುವರೆಯಲಿ ಯಾನ....

    ಕೊನೆಯ ಕೆಲವು ಸಾಲುಗಳ ನೈಪುಣ್ಯತೆ ಖುಷಿ ಕೊಡ್ತು....

    ಸುಪೆರಬ.......


    ReplyDelete
  18. ಸಂಧ್ಯಾ ಮೇಡಂ... ಕಥೆ ನೆನಪಾದಾಗಲೆಲ್ಲಾ ಕಣ್ಣಿರು ಕಟ್ಟೆಯೊಡೆದು ಹರಿಯುತ್ತದೆ. ಹುಡುಗರು ಅಳುವುದು ಕಡಿಮೆಯಂತೆ ಆದರೆ ಈ ಕಥೆ ಮಾತ್ರ ಖಂಡಿತ ಇದಕ್ಕೊಂದು ಅಪವಾದ..
    ನೀವು ಬರೆಯುತ್ತಿರಬೇಕು... ನಾವು ಓದಿ ಆಸ್ವಾದಿಸುತ್ತಿರಬೇಕು...

    ReplyDelete
  19. ಸಂಧ್ಯಾ ಮೇಡಂ ನಿಮ್ಮ ಈ ಕಥೆಯನ್ನು ( ಬ್ಲಾಗ್ ಪುಠವನ್ನು )ನಿಮ್ಮದೇ ಹೆಸರಿನಲ್ಲಿ ಫೇಸ್ ಬುಕ್ ನಲ್ಲಿ ಶೇರ್ ಮಾಡಿರುವೆ...
    ಕಾಪಿ ರೈಟ್ ಏನಾದರು ಇದ್ದಲ್ಲಿ ತಿಳಿಸಿ. ಈ ಕೂಡಲೇ ತೆಗೆಯುತ್ತೇನೆ.

    ReplyDelete
  20. ದೇವಯಾನಿ....ಭಾವವೊಂದು ನನ್ನ ತಾಕಿ ನನ್ನೂ ಜೊತೆ ಸೇರಿಸಿಕೊಂಡು ಹೋದ ಅನುಭವ.
    ಯಾಕೋ ಬರಿಯ ಕಥೆಯಾಗಿ ನೋಡಲಾಗದ ಭಾವವಿದು.
    ಕಣ್ಣಂಚು ಒದ್ದೆ ಒದ್ದೆ.
    ಎಲ್ಲಾ ಭಾವಗಳಲ್ಲೂ ಪೂರ್ತಿಯಾಗಿ ನಮ್ಮ ಮುಳುಗಿಸಿಬಿಡೋ ಸಂಧ್ಯಕ್ಕ ,ನಿನ್ನಂಗಳದ ಈ ಭಾವ ನನ್ನ ಪೂರ್ತಿಯಾಗಿ ಕಾಡ್ತಿದೆ.
    ಥಾಂಕ್ಸ್ ಫ಼ಾರ್ ದಿಸ್ ಫೀಲ್!

    ReplyDelete
    Replies
    1. ಈ ದೇವಯಾನಿಯ ಮೊದಲ ಸಾಲುಗಳನ್ನು ಫೇಸ್ ಬುಕ್ ನ ಸ್ಟೇಟಸ್ ಮಾಡಿದಾಗ ಮುಂದುವರೆಸುವ ಯಾವ ಉದ್ದೇಶವೂ ಇರಲಿಲ್ಲ. ಆದರೆ ಅದ್ಯಾವುದೋ ಘಳಿಗೆಯಲ್ಲಿ ದೇವಯಾನಿ ತಾನಾಗೆ ರೂಪುಗೊಂಡಳು. ಅವಳನ್ನು ನಿಮ್ಮ ಮುಂದಿರಿಸುವಾಗಲೂ ನೀವೆಲ್ಲ ಮನದಲ್ಲಿಷ್ಟು ಜಾಗ ಕೊಡುತ್ತೀರಿ ಎಂದು ಖಂಡಿತಾ ಅಂದುಕೊಂಡಿರಲಿಲ್ಲ ..

      ಧನ್ಯವಾದ ಪ್ರತಿಯೊಬ್ಬರಿಗೂ ...


      --

      Delete
  21. ಕಡೆಯ ಸಾಲುಗಳು ಮತ್ತು ಇದರ ಅಂತ್ಯ.. ಇದರ ಬಗ್ಗೆ ಹೇಳಲೇ ಬೇಕು ಎನ್ನಿಸುತ್ತಿದೆ.. "ಕಂಗಳು ವಂದನೆ ಹೇಳಿದೆ ಹೃದಯವು ತುಂಬಿ ಹಾಡಿದೆ ಹಾಡದೆ ಉಳಿದಿಹ ಮಾತು ನೂರಿದೆ" ಮುಗಿಯದ ಕಥೆ ಚಿತ್ರದ ಹಾಡು ನೆನಪಿಗೆ ಬಂತು.. ಲೇಖನ / ಕಥೆ ಮುಕ್ತಾಯ ಎನ್ನಿಸಿದರೂ ಇನ್ನು ಮುಂದೆ ಇದೆ ಎನ್ನುವ ಭಾವ..

    ಬಲು ದೂರ ಹರಿದು ಬರುವ ನೀರು ಪ್ರಪಾತ ಕಂಡೊಡನೆ ಹಟಾತ್ ಪ್ರಪಾತಕ್ಕೆ ಬೀಳುವ ರಭಸ, ಆ ಭೋರ್ಗರೆತ ಈ ಲೇಖನದ ಅಂತ್ಯದ ಸಾಲುಗಳಲ್ಲಿ ಮೂಡಿ ಬಂದಿದೆ..

    ಇಷ್ಟವಾಯಿತು.. ಎರಡು ಸುಂದರ ವಸಂತಗಳನು ದಾಟಿ ಮತ್ತೊಂದು ವಸಂತಕ್ಕೆ ಕಾಲಿಟ್ಟಿರುವ ಅಂಗಳದಲ್ಲಿ ಇನ್ನು ಇನ್ನು ಮೊಗೆದಷ್ಟು ಲೇಖನಗಳ ರಂಗವಲ್ಲಿ ನಗುತ್ತಿರಲಿ...

    ಸೂಪರ್ ಎಸ್ ಪಿ ಅಭಿನಂದನೆಗಳು

    ReplyDelete
  22. Kathe tumba chennagi barediddira sandhya....

    ReplyDelete
  23. Nan hindin comment ello maaya aatu :-(

    ReplyDelete
  24. Kate bari chenagiddu andre odid bhavakke mosa maadidange agtu..adu sakat sakat..odi arda gante bit comment maadidru innnu devayaanide dhyana.naave kateya ondu bhaaga aadange..konege duranta ansidrunu overall ag ishta aatu..shubhasanje

    ReplyDelete
  25. hi super ri........... bavanegala...... bandakke.........., nanagaagiye baredante iruva ee katege mattu baredavarige thanks riiiiiiii

    ReplyDelete