Thursday 26 September 2013

ಖಾಲಿ ಹಾಳೆ



ಸೆಂಟರ್ ನಿಂದ ಬರುವವಳಿಗೆ ಪಾನಿಪೂರಿ ತಿನ್ನುವ ಮನಸ್ಸಾಗಿತ್ತು. ಹೋಗಿ "ಭಯ್ಯಾ  ದೋ ಪ್ಲೇಟ್ ಎಂದವಳು ನಾಲಿಗೆ ಕಚ್ಚಿಕೊಂಡೆ." "ಅರು" ಇರಬೇಕಿತ್ತು. ನಮ್ಮಿಬ್ಬರ Ever time favorite  ಈ ಪಾನಿಪೂರಿ ಎಂದುಕೊಂಡವಳಿಗೆ  ಥಟ್ಟನೆ ನೆನಪಾದದ್ದು ಅರ್ಜುನ್ ಇವತ್ತು ಬರುತ್ತಾರೆಂಬುದು. ತಿಂದು ಮುಗಿಸಿದವಳು ಬೇಗ ಬೇಗ ಮನೆ ಕಡೆ ಹೆಜ್ಜೆಹಾಕಿದೆ. ಆತನ ನೆನಪೇ ಹಾಗೆ ವಾಯುವೇಗ ಕೊಟ್ಟುಬಿಡುತ್ತದೆ ಎಂದುಕೊಂಡೆ. ಬಾಗಿಲು ತೆರೆದಿತ್ತು. ಒಳಗೆ ಯಾವುದೊ ಕಾರ್ಟೂನ್ enjoy  ಮಾಡುತ್ತಿದ್ದ ಅರ್ಜುನ್  ನ ನೋಡಿದವಳಿಗೆ ಮನೆಯಲ್ಲಿ ಒಬ್ಬರೇ ಇಲ್ಲ ಎಂಬ ಅರಿವಾಯ್ತು, ಗೆಸ್ಟ್ ರೂಮ್ ಕಡೆ ನೋಡಿದವಳಿಗೆ ಕಂಡದ್ದು ಒಬ್ಬ ಹುಡುಗಿ. ಅವರು ಹೆಣ್ಣುಮಕ್ಕಳನ್ನು ಹೀಗೆ ಕರೆತರುವುದು ನನಗೆ ಹೊಸದೇನೂ ಅಲ್ಲವಾದ್ದರಿಂದ ನಸು ನಗುತ್ತಲೇ ಸ್ನಾಕ್ಸ್ ತಯಾರಿಯಲ್ಲಿ ತೊಡಗಿದೆ. 



"ಉನ್ನತಿ" ನನ್ನ ಮತ್ತು  ಅರ್ಜುನ್ ನ ನನಸಾದ ಕೂಸು. ನಾವಿಬ್ಬರೂ ಸೇರಿ ಮಹಿಳೆಯರ ಸಬಲಿಕರಣಕ್ಕೆ, ವೇಶ್ಯಾವಾಟಿಕೆಗೆ ಬಲಿಯಾದವರಿಗೆ,ಆ  ವೃತ್ತಿಯಿಂದ ಹೊರಬರಲು ಇಶ್ಚಿಸುವವರಿಗಾಗಿ, ಅವರ ಪುನರ್ವಸತಿಗಾಗಿ ಪ್ರಾರಂಭಿಸಿದ ಏನ್ ಜಿ ಓ. ಆಗಲೇ ಮೂರು ವರ್ಷಗಳಾಯ್ತಲ್ಲ ಎಂದುಕೊಳ್ಳುತ್ತಾ  ಅವರಿಗೆ ಸ್ನಾಕ್ಸ್ ಕೊಟ್ಟೆ. "ಆಕೆಗೂ ಕೊಡು, ಒಳ್ಳೆಯವಳ ಥರ ಕಾಣಿಸ್ತಾಳೆ. ಮನೆಗೊಬ್ಬಳು ಕೆಲಸದವಳು ಬೇಕೆಂದೆಯಲ್ಲ ಇಷ್ಟ ಆಗ್ತಾಳ ನೋಡು, ಇಲ್ಲಾಂದ್ರೆ ನಾಳೆ ಸೆಂಟರ್ ಗೆ ಬಿಟ್ಟು ಬರುತ್ತೇನೆ"  ಎಂದರು.  ಸರಿ ಎಂದು ಅವಳಿಗೆ  ಕೊಡಲು ಹೋದವಳು , ಅವಳನ್ನು ನೋಡಿ ನಿಜಕ್ಕೂ ಗರ ಬಡಿದವಳಂತೆ ನಿಂತೆ. ತಿಂದ ಪಾನಿಪೂರಿ ಗಂಟಲಲ್ಲೇ ಸಿಕ್ಕಿಕೊಂಡ ಅನುಭವ.. !! ಅರ್ಜುನ್ ಗೆ ಅಲ್ಲಿಂದಲೇ ಕಿರುಚಿದೆ "ಇವಳನ್ನು ಸೆಂಟರ್ ಗೆ ಬಿಟ್ಟು ಬನ್ನಿ ಪ್ಲೀಸ್." ನನ್ನ ನಡುವಳಿಕೆ ಅವರಿಗೆ ಇರುಸು ಮುರಿಸಾದರೂ "ಸರಿ ಜಾನು  ಬಿ ಕೂಲ್ "ಎನ್ನುತ್ತಾ ಅವಳನ್ನು ಕರೆದುಕೊಂಡು ಹೋದರು. ಆಕೆಯ ಮುಖಭಾವ ಹೇಗಿತ್ತು ಎಂದು ನೋಡಬೇಕಿತ್ತು ಎನಿಸಿದರೂ ನೋಡಲಾಗಲೇ ಇಲ್ಲ. ಬಹುಶಃ ನನ್ನ ಸ್ಥಿತಿಯಲ್ಲೇ ಆಕೆಯೂ ಇದ್ದಳೇನೋ. 

ಅವಳನ್ನೂ ಈ ಸ್ಥಿತಿಯಲ್ಲಿ ನೋಡುತ್ತೇನೆ ಎಂಬುದನ್ನು ಊಹಿಸಿಕೊಂಡಿರಲಿಲ್ಲ. ಆಕೆ ಮಧು.. ಜೇನು..  ಒಂದು ಕಾಲದಲ್ಲಿ ಹುಡುಗರ ನಿದ್ದೆ ಕೆಡಿಸಿದವಳು,  ಮೆರೆದವಳು, beauty is strength  ಬೇಬಿ. ನೋಡು ಗಂಡುಮಕ್ಕಳು ನನ್ನ ಚಪ್ಪಲಿನಾ ತಲೆ ಮೇಲೆ ಇಟ್ಕೊಂಡು ಓಡಾಡ್ತಾರೆ. ಕಣ್ಸನ್ನೆ ಮಾಡಿದ್ರೆ ಕೆಲಸ ಆಗುತ್ತೆ.  ಮನೆ ಮುಂದೆ ನಾಯಿ ಥರ ಬಿದ್ದಿರ್ತಾರೆ ಹುಡುಗರು. ನಿಮಗೆಲ್ಲ ಎಲ್ಲಿದೆ ಆ ಭಾಗ್ಯ. ಅಂತ ಹುಬ್ಬು ಹಾರಿಸಿದವಳು, ಇಂದು ನಮ್ಮನೆಯಲ್ಲಿ.. ಅದೂ ಈ ಸ್ಥಿತಿಯಲ್ಲಿ .. !! ಮನಸ್ಸಿಗೆ ಕಸಿವಿಸಿಯಾಯ್ತು. ಜೇನು ಹುಳು ಥರಾನೆ ಹತ್ತಾರು ಹುಡುಗರನ್ನ ಬದಲಿಸಿ ಈ ಯಾರೋ ವಿ ಜೆ ವಿಶಾಲ್ ಎನ್ನುವವನ ಜೊತೆ ಮುಂಬೈ ಸೇರಿದ್ದಾಳಂತೆ ಎಂಬುದು ಕೊನೆ ಸುದ್ದಿಯಾಗಿತ್ತು ಅವಳ ಬಗೆಗೆ ಕೇಳಿದ್ದು.  ಇನ್ನೂ ಮುಂದುವರೆಯಬಹುದಾಗಿದ್ದ ಆಲೋಚನೆಗಳನ್ನು ನಿಲ್ಲಿಸಿದ್ದು ನನ್ನವನ ತೋಳು. ಬಿಸಿ ಅಪ್ಪುಗೆಯಲ್ಲಿ ಕರಗಿ ಹೋದೆ. ನಿನ್ನ ಮನಸ್ಸಿನ ತೊಳಲಾಟಗಳಿಗೆಲ್ಲ ನಾ ಕಿವಿಯಾಗಬಲ್ಲೆ ಎಂಬ ಭರವಸೆ ಆ ತೊಳುಗಳಲ್ಲಿತ್ತು. 

******************************************************
ಮರುದಿನ ಮುಂಜಾನೆ ಅಂಗಳದ ರಂಗವಲ್ಲಿ ನಗುತಿತ್ತು. ಕಾಫಿ ಮಾಡುತ್ತಿದ್ದವಳಿಗೆ ಅರ್ಜುನ್ ಒಂದು ಪತ್ರಕೊಟ್ಟು ನಿನ್ನೆ ಕರೆತಂದ ಹುಡುಗಿ  ಸುಸೈಡ್ ಮಾಡಿಕೊಂಡಿದ್ದಾಳೆ. ಸುಸೈಡ್ ನೋಟ್ ಬೇರೆ ಇದೆ. ಈ ಪತ್ರದ ಮೇಲೆ ನಿನ್ನ ಹೆಸರಿತ್ತು ಅದಕ್ಕೆ ಇನ್ಸ್ಪೆಕ್ಟರ್ ಕೊಟ್ಟರು. ಮುಂದಿನದೆಲ್ಲ  ಕೆಲಸಗಳು  ನಡೆಯುತ್ತಿವೆ . .ಇದು ನಮಗೆ  ಹೊಸದೇನೂ ಅಲ್ಲವಲ್ಲ ಎನ್ನುತ್ತಾ ಕಾಫಿ ತೆಗೆದುಕೊಂಡು ಹೋದರು. ಸಾವಿಗೆ  ನಾನೇ ಕಾರಣಳಾದೇನಾ ?  ಎಂದುಕೊಳ್ಳುತ್ತಾ  ನಡುಗುವ ಕೈಗಳಲ್ಲಿ ಪತ್ರ ಬಿಡಿಸಿದೆ. 

ಜಾನು , ಜಾನ್ಹವಿ.. 

ನನ್ನನ್ನು ಬಹಳ ಹತ್ತಿರದಿಂದ ನೋಡಿದವಳು ನೀನು. ಏಳು ವರ್ಷಗಳಿರಬೇಕಲ್ಲ ಒಟ್ಟಿಗಿದ್ದೆವು.  beauty is strength ಎಂದೇ ಬದುಕಿದವಳು ನಾನು. ನಿನಗೆ ಗೊತ್ತಲ್ಲ ನನಗಾಗಿ ಹುಡುಗರು ಸಾಯುತ್ತಿದ್ದರು. ನನ್ನದೊಂದು ನೋಟಕ್ಕಾಗಿ ಕಾಯುತ್ತಿದ್ದವರೆಷ್ಟೋ. ಎಷ್ಟೋ ಹುಡುಗರ ಹೃದಯದಲ್ಲಿ ಅನಭಿಷಿಕ್ತ ರಾಣಿಯಾಗಿ ಮೆರೆದವಳು. ಅದೇ ಅಂದವನ್ನೇ ಬಳಸಿಕೊಂಡೆ. ಕಾಲೇಜಿನ ಮೂರು ವರ್ಷಗಳಲ್ಲಿ  ಆರು ಬಾಯ್ ಫ್ರೆಂಡ್ ಗಳು ಬದಲಾದರು. ಕಾಲಿನ ಚಪ್ಪಲಿಯಿಂದ ಹಿಡಿದು ಕೈಯಲ್ಲಿನ ಕಾಸ್ಟ್ಲಿ ಮೊಬೈಲ್ ವರಿಗಿನ ಎಲ್ಲ ಗಿಫ್ಟ್ ಗಳು ನನ್ನ collection ಲ್ಲಿದ್ದವು. ಈ ಥರಹದ ಕೊಳ್ಳುವಿಕೆಯಲ್ಲಿ ' ಕೊಡುವಿಕೆಯೂ' ಇದ್ದೇ ಇತ್ತು. ಕಾಲೇಜ್ ಮುಗಿದ ಮೇಲೆ ಹುಡುಗು ಬುದ್ಧಿಯ ಆಟಗಳೆಲ್ಲ ಕೊನೆಯಾಗಬಹುದಿತ್ತು. ಆದರೆ ಸಿಕ್ಕ ಐದಂಕಿಯ  ಸಂಬಳದ ಕೆಲಸ ಹೈ ಸೊಸೈಟಿ ಗೆ ತೆರೆದುಕೊಟ್ಟಿತು. ಮದ್ಯಮವರ್ಗಕ್ಕೆ ವರ್ಜ್ಯವಾದ ಕೆಲಸಗಳೆಲ್ಲ ಹೈಸೋಸೈಟಿಯಲ್ಲಿ  ಮಾಮೂಲು ಎನ್ನುವಂಥವು. ಸುತ್ತಾಟ, ಶಾಪಿಂಗ್ ಗಳೆಲ್ಲ ಜೋರಾದವು. ವೀಕೆಂಡ್ ಗಳು ಬದಲಾದಂತೆ ಹುಡುಗರೂ ಬದಲಾದರು. ಬಾಸ್ ಗಳು, ಮ್ಯಾನೇಜರ್ ಗಳು, ಸಹೋದ್ಯೋಗಿಗಳು, ಸೋಶಿಯಲ್ ನೆಟ್ವರ್ಕ್ ಗಳ ಗೆಳೆಯರು ಎಷ್ಟೆಲ್ಲಾ ಜನ ಬಂದರು ಹೋದರು. ಎಲ್ಲರೂ ನನ್ನ ಅಂದಕ್ಕಾಗಿ ಸಾಯುತ್ತಿದ್ದರು. "ಕೊಡುಕೊಳ್ಳುವಿಕೆ" ಇಲ್ಲೂ ಮುಂದುವರಿಯುತ್ತಿತ್ತು. ಆಗಿನ ಚಿಕ್ಕ 'ಕೊಡುವಿಕೆಯೆಲ್ಲ ' ಈಗ ದೊಡ್ಡದಾಗಿ ಬದಲಾಗಿತ್ತು. ಏನೇನೋ ಪಡೆದುಕೊಂಡಿದ್ದೆ ,ಬದಲಾಗಿ  " ಎಲ್ಲವನ್ನೂ " ಕಳೆದುಕೊಂಡಿದ್ದೆ. ಜೀವನ ಮಜವಾಗಿತ್ತು ಆಗ. ಪ್ರೀತಿ ಹೆಸರಲ್ಲಿ ಮೋಸ ಮಾಡಿದವರು ಬಹಳಷ್ಟು ಜನ. ಅವರ ಮೇಲೆ ಸೇಡು ತೀರಿಸಿಕೊಳ್ಳುವುದಕ್ಕಾಗಿ ಇನ್ನೊಬ್ಬರ ಹುಡುಕಾಟ,ಈತ ಮೋಸ ಮಾಡಲಾರ ಎಂಬ ಭರವಸೆಯಲ್ಲಿ. ಆದರೆ ಎಲ್ಲ ಸಂಬಂಧಗಳು ಒಂದೋ ಅವರಿಗೆ ನನ್ನ ಆಕರ್ಷಣೆ ಕಡಿಮೆಯಾಗುವವರಿಗೆ, ಅಥವಾ ನನಗೆ ಅವರಲ್ಲಿ ಆಕರ್ಷಣೆ ಕಡಿಮೆಯಾಗುವಲ್ಲಿಗೆ ಮುಗಿಯುತ್ತಿತ್ತು. 

ಈ ಮಧ್ಯೆ ಮನಸ್ಸು ನಿಜಕ್ಕೂ ಒಬ್ಬ ಸಂಗಾತಿಯನ್ನು ಬೇಡುತ್ತಿತ್ತು. ವಿಡಿಯೋ ಜಾಕಿ ವಿಶಾಲ್ ಇಷ್ಟವಾಗಿದ್ದ. ಆತನನ್ನು ನಿಜವಾಗಿಯೂ ಪ್ರೀತಿಸುತ್ತಿದ್ದೆ. ಆತನೂ ಅಷ್ಟೇ. ಮನೆಯಲ್ಲಿ ಒಪ್ಪಲಿಲ್ಲ. ಆತ  ಮುಂಬೈ ಗೆ ಹೋಗಿಬಿಡೋಣ ಎಂದ. ಮನೆಯವರನ್ನು ಧಿಕ್ಕರಿಸಿ ಆತನೊಂದಿಗೆ ಮುಂಬೈ ಸೇರಿದೆ. ಅಪ್ಪ ಮಗಳು ಸತ್ತಳು ಎಂದು ಕೊಡ ನೀರು ಸುರಿದುಕೊಂಡು ಸಂಬಂಧ ಕಡಿದುಕೊಂಡರು. ಪುಟ್ಟದೊಂದು ಸಂಸಾರ ನಡೆಸಿಕೊಂಡು ಮನೆಯವರಿಗೆ ಸಡ್ಡು ಹೊಡೆದು ಬದುಕಬಹುದಿತ್ತು. ಆದರೆ ಕಡಲ ನಗರಿ ನನ್ನ ಮನಸಲ್ಲಿ ಬೇರೆಯದೆಯೇ ಅಲೆ ಎಬ್ಬಿಸಿತು. ಇಲ್ಲಿನ ಮಬ್ಬು ಬೆಳಕಿನ ಪಬ್ ಗಳಲ್ಲಿ , ಬಾರ್ ಡಿಸ್ಕೋ ಥೆಕ್ ಗಳ ತಳುಕಿನಲ್ಲಿ ವಿಶಾಲ್ ನ ಕಳೆದುಕೊಂಡೆ. ವಿಶಾಲ್ ತರುವ ತಿಂಗಳ ಸಂಬಳಕ್ಕೆ ಕಾಯುವ ಬದಲು ನನಗಾಗಿ ಅಷ್ಟನ್ನು ಒಂದೇ ದಿನಕ್ಕೆ ಖರ್ಚು ಮಾಡುವ ಶ್ರೀಮಂತರೇ ಪ್ರೀತಿಯಾದರು. ಮಧು ಎಂದು ಹೆಸರಿಟ್ಟುಕೊಂಡವಳು ಅಕ್ಷರಶಃ ಜೇನಿನಂತೆ ಸುತ್ತಿದೆ. ಈಗೀಗ ವಯಸ್ಸು ಬುದ್ಧಿ ಹೇಳತೊಡಗಿತ್ತು. ನೆಮ್ಮದಿಯ ಬದುಕು ಕಟ್ಟಿಕೊಳ್ಳಬೇಕು ಎನಿಸುತ್ತಿತ್ತು. ದೇಹಸಂಗಕ್ಕಿಂತ ಮನಸ್ಸಿಗೆ ಸಂಗಾತಿ ಬೇಕಿತ್ತು. ರಂಜಿತ್ ಎಂಬ ಆಗರ್ಭ ಶ್ರೀಮಂತನೊಬ್ಬ ನನ್ನ ಕಥೆಯೆಲ್ಲಾ ಗೊತ್ತಿದ್ದೂ ನನ್ನ ಮದುವೆಯಾದಾಗ ಬಾಳು ಒಂದು ಹಂತಕ್ಕೆ ಬಂತು ಎಂದುಕೊಂಡೆ. ಆದರೆ ಆಗಿದ್ದೆ ಬೇರೆ. "ತಾಳಿಯ ಲೈಸೆನ್ಸ್ ಕೊಡಿಸಿದ್ದೆ ಈ ಧಂಧೆಗಾಗಿ. ನಿನ್ನನ್ನು ಕಟ್ಟಿಕೊಂಡಿದ್ದು ಸಂಸಾರ ಮಾಡುವುದಕ್ಕಾಗಿ ಅಲ್ಲ , ಮಾಡಿಸುವುದಕ್ಕಾಗಿ ಎಂದ." ನರಕವಾಯಿತು ಜೀವನ. ನನ್ನ ಕೈಯಿಂದಲೇ ಸುಂದರ ಬದುಕನ್ನು ಕತ್ತು  ಹಿಸುಕಿ ಸಾಯಿಸಿದ್ದೆ ನಾನು. ಆ ನರಕ ಬೇಸರವಾಗಿ ಉಟ್ಟ ಬಟ್ಟೆಯಲ್ಲೇ ಅಲ್ಲಿಂದ ಓಡಿ ಬಂದೆ. ಇಲ್ಲಿ ಯಾರಿಗೆ ಮುಖ ತೋರಿಸಲಿ ಹೇಳು.? ಸಾವೊಂದೇ ಎದುರಿಗಿದಿದ್ದು. ಸಾಯಬೇಕೆಂದು ಹೊರಟವಳನ್ನು ತಡೆದು ಆಶ್ರಯ ನೀಡುತ್ತೇನೆ ಕರೆದುಕೊಂಡು ಬಂದಿದ್ದು ನಿನ್ನ ಗಂಡ. ಇಷ್ಟು ಚಂದವಿದ್ದೀರ ಯಾಕೆ ಸಾಯಬೇಕು ಎಂದು ಆತ  ಕೇಳಿದಾಗ  "ಚೆಂದವಿರುವುದರಿಂದಲೇ" ಎಂದಿದ್ದೆ. ನನ್ನಾಕೆ ನಿಮ್ಮಷ್ಟು ಚೆಂದವಿಲ್ಲ, ಆದರೆ ನಿಜ ಹೇಳ್ತೀನಿ ಗುಣದಲ್ಲಿ ಮಾತ್ರ ಆಕೆಯಷ್ಟು ಸುಂದರಿ ಇನ್ಯಾರು ಇಲ್ಲ ಗೊತ್ತಾ ಅಂತ ನಿನ್ನ ಬಗೆಗೆ ಆತನಿಗಿದ್ದ ಗೌರವ. ನಿನ್ನೆಡೆಗಿನ ಆತನ ಪ್ರೀತಿ ಎಲ್ಲವನ್ನು ಕಾರಲ್ಲಿ ಬರುವಾಗ ಹೇಳಿದ್ದರು ಆತ. ನಿಮ್ಮ ಸೆಂಟರ್ ನ ಉದ್ದೇಶಗಳು, ಕೆಲಸಗಳ ಬಗೆಗೆಲ್ಲ ಹೇಳಿದ್ದರು. ಆದರೂ ಯಾಕೋ ನನ್ನಲ್ಲಿ  ಬದುಕುವ ಆಸೆ ಚಿಗುರಲೇ ಇಲ್ಲ. 

ಬಹುಶಃ ನೀ ಪತ್ರ ಓದುತ್ತಿರುವೆಯಾದರೆ ನಾನಿಲ್ಲ ಖಂಡಿತವಾಗಿಯೂ.ನಿನಗೆ  ಚಂದದ ಸಂಸಾರವಿದೆ ಬೇಬಿ. ನಿಜವಾಗಿ ಮೋಸ ಹೋದವರಿಗೆ, ಬಲಿಯಾದವರಿಗೆ ಆಶ್ರಯಾವಾಗಲಿ ನಿನ್ನ ಉನ್ನತಿ. ಬದಲಾಗಿ ನನ್ನಂತೆ ಬೇಕೆಂದೇ ಜೀವನವನ್ನು ಹಾಳುಮಾಡಿಕೊಂಡವರಿಗಲ್ಲ. ಸಾಯುವಾಗಲೂ ನಿಮಗೆ ತೊಂದರೆ ಕೊಟ್ಟೇ ಹೋಗುತ್ತಿದ್ದೇನೆ. ಕ್ಷಮೆಯಿರಲಿ. ನನ್ನ ಕುರಿತಾಗಿ ನಿನ್ನ ಕಣ್ಣಲ್ಲಿ ಎರಡು ಹನಿಯಾದರೂ ಜಿನುಗಿದರೆ ಅವೇ ನನ್ನನ್ನು ಕಾಯುತ್ತವೇನೋ ... 

ಇಂತಿ   ಮಧು.. 


ಇವಿಷ್ಟನ್ನು ಓದುವ ಹೊತ್ತಿಗೆ ಕಣ್ಣಂಚಲ್ಲಿ ನೀರು ಜಿನುಗುತ್ತಿತ್ತು. ಹಿಂದಿಂದ  ಬಂದ ಅರ್ಜುನ್ "ಯಾಕೆ ಜಾನು ? ಇದು ನಮಗೇನೂ ಹೊಸ ಕೇಸ್ ಅಲ್ಲವಲ್ಲ.  ಬಿ ಕೂಲ್. ಆಕೆಯ ಸಂಬಂಧಿಗಳ್ಯಾರು ಇದ್ದಂತಿಲ್ಲ.  ಪೋಸ್ಟ್ ಮಾರ್ಟಂ ಆದಮೇಲೆ ಹಾಗೆಯೇ ಚಿತಾಗಾರಕ್ಕೆ ಕಳುಹಿಸಬೇಕು" ಅಂದ. "ಇಲ್ಲ ಅರ್ಜುನ್  ಆಕೆ ನನ್ನ ಗೆಳತಿ. ಬಹುಶಃ ಗೆಳತಿಯರಾಗಿ ನಾವೆಲ್ಲಾ ಆಕೆ ಹೀಗಾಗದಂತೆ ತಡೆಯಬಹುದಿತ್ತೇನೋ. ಆದರೆ ನಾವು ತಪ್ಪು ಮಾಡಿ ಬಿಟ್ಟೆವು. ಈಗ ಆಕೆಯನ್ನು ಅನಾಥಳಂತೆ ಕಳುಹಿಸಿಕೊಡಲು ಇಷ್ಟವಿಲ್ಲ. ಎಲ್ಲರಿಗೂ ಫೋನ್ ಮಾಡುತ್ತೇನೆ.  ಫ್ರೆಂಡ್ಸ್ ಎಲ್ಲ ಬರ್ತಾರೆ" ಎನ್ನುತ್ತಾ ಫೋನ್ ಬುಕ್ ಓಪನ್ ಮಾಡಿ ಕುಳಿತುಕೊಂಡೆ.