Tuesday 28 May 2013

ಪ್ರೀತಿಯ ಕೊಳಲನ್ನು ಮುರಿದು ನಿಶ್ಯಬ್ದದಲ್ಲಿ ಬದುಕಬೇಕಿದೆ.

ಇವತ್ತೇಕೋ ಬರೆಯಬೇಕೆನಿಸುತ್ತಿದೆ.  ಈ ಪೂಪಿ ಗೆ ಎಲ್ಲವನ್ನು ನೇರವಾಗಿಯೇ ಹೇಳಿ ಅಭ್ಯಾಸವಿದ್ದಿದ್ದು.   ಈಗಲೂ ಅಷ್ಟೇ ಜಿಯಾ ನಿನ್ನೆದುರು ಕಾಲೂರಿ ನಿಂತು , ಕಣ್ಣಲ್ಲಿ ಕಣ್ಣಿಟ್ಟು ಮುಂದೆ ಬರೆಯುವ ಎಲ್ಲ ಸತ್ಯಗಳನ್ನು ಹೇಳಬಲ್ಲೆ .
ಒಂದು ಚಂದದ ಗೆಳೆತನವಿತ್ತು ಅಲ್ಲವಾ.  'ಪೂಪಿ' , 'ಜಿಯಾ', ಅವನೊಬ್ಬನಿದ್ದ 'ಸನ್ನು'. ಅದೇನದು ನಮ್ಮ ಮೂವರನ್ನೂ ಕಂಡು ಎಲ್ಲ ಹೇಳುತ್ತಿದ್ದಿದ್ದು " ಒಬ್ಬ ಕೃಷ್ಣ ರಾಧೆಯರಿಬ್ಬರು" ಅಂತ ಅಲ್ವಾ .  

ಒಂದು ವೇಳೆ ಅವನು ಕೃಷ್ಣನಾದರೆ
 ಭಾಮೆ ನಾನೇ
ನೀ ರಾಧೆಯಾಗಬೇಕಿತ್ತೇನೋ.
 ಆದರೆ ನಾ ಭಾಮೆಯಾಗಲೂ ಇಲ್ಲ. 
ನಿನಗೆ ರಾಧೆಯಾಗಲೂ ಬಿಡಲಿಲ್ಲ. 
ಅವನು ಮಾತ್ರ ರಾಮನಾಗಿಬಿಟ್ಟ ಚೆಂದದ ಅವನದೇ ಸಂಸಾರದಲ್ಲಿ.

ನೀನು ಬಹುಶಃ ಸೀತೆಯಂತೆ ಬದುಕುತ್ತಿರಬಹುದು. ಆದರೆ ನಾನು ... Never.... ಅಪ್ಪನದು ರಾಜಕೀಯದ ತುಪ್ಪ , ಅಣ್ಣನದು  ರೌಡಿಸಂ ಉರಿ...  ಇದೆರಡರ ಮಧ್ಯೆ ಹೂ ಅರಳಲು ಸಾಧ್ಯವಾ ನಾ ಬೆಳೆದದ್ದು ಹಾಗೆಯೇ. ಸೋತು ಗೊತ್ತಿರಲಿಲ್ಲ. ಸೋಲನ್ನು ಸಹಿಕೊಂಡು ಗೊತ್ತಿಲ್ಲ.ಕೇಳುವ ಮೊದಲೇ ಎಲ್ಲವೂ ಕಾಲಡಿಯಲ್ಲಿರುತ್ತಿತ್ತು. ಇಲ್ಲವೆಂದರೆ  ಕೇಳಿ ಗೊತ್ತು ಕೊಡದಿದ್ದರೆ ಕಿತ್ತುಕೊಳ್ಳುವುದು ಗೊತ್ತು. ಹಂಚಿಕೊಳ್ಳುವುದು..  ಹೊಂದಾಣಿಕೆ...  ಊಹುಂ ... ಗೊತ್ತಿಲ್ಲ...  ಯಾರ ಮಾತನ್ನು ಕೇಳದೆ Don't   care  ಎನ್ನುವ ನನ್ನನ್ನು ಮಾತು ಕೇಳಿಸುವ ತಾಕತ್ತು ನಿಮ್ಮಿಬ್ಬರಿಗಿತ್ತು. ನಿನ್ನ ಸ್ಪರ್ಶ ಮತ್ತು ಅವನ ಕಣ್ಣುಗಳು ನನ್ನನ್ನು ಎಷ್ಟೋ ವಿಷಯಗಳಲ್ಲಿ ತಡೆಯುತ್ತಿದ್ದವು. 

ನಿನ್ನ ಮತ್ತು ಸನ್ನುವನ್ನು ನೋಡಿ ಇಡಿ ಕಾಲೇಜ್  ಒಳ್ಳೆ ಜೋಡಿ ಎನ್ನುತ್ತಿತ್ತು. ನನಗೆ ನಿಜಕ್ಕೂ ಇದನ್ನು ಸಹಿಕೊಳ್ಳಲು ಸಾದ್ಯವಿರಲಿಲ್ಲ. ಹಾಗಂತ ನಾನೇನು ಸನ್ನುವನ್ನು ಬಯಸುತ್ತಿರಲಿಲ್ಲ. ನಿಮ್ಮಿಬ್ಬರನ್ನು ಕಳೆದುಕೊಳ್ಳುವ ಮನಸ್ಸಿರಲಿಲ್ಲ. ನೀವಿಬ್ಬರು ಒಂದಾಗಿ ನಿಮ್ಮ ನಡುವೆ ನಾನಿದ್ದೇನೆ ಎನ್ನುವ ಭಾವನೆಯಲ್ಲಿ ಬದುಕುವುದಕ್ಕೆ ನಾನು ತಯಾರಿರಲಿಲ್ಲ. ಯಾವಾಗ ಸನ್ನುವಿನೆಡೆಗಿನ ನಿನ್ನ ಭಾವನೆಗಳು ಬದಲಾಗ ತೊಡಗಿದ್ದು ನನಗೆ ತಿಳಿಯಿತೋ    ಎಲ್ಲೋ ಸ್ನೇಹ ಕಳೆದುಕೊಳ್ಳುತ್ತೇನೆ ಎನ್ನುವ ಭಯ ಕಾಡತೊಡಗಿತು. ಅದಕ್ಕೆ ನಿಮ್ಮಿಬ್ಬರಿಗೆ  ಬೇಕಂತಲೇ ಅಡ್ಡ ನಿಂತೆ ನಾನು. ಸನ್ನುವನ್ನು ನಾನು ಪ್ರೀತಿಸುತ್ತಿದ್ದೇನೆ ಎನ್ನುವ ಮಾತನ್ನು ನಿನ್ನ ಮುಂದೆ ಆಡಿದ್ದೆ.  ಮುಗ್ದೆ ನೀನುನಿನಗೆ ತಿಳಿಯಲೇ ಇಲ್ಲ. ಅವನಲ್ಲಿ ಯಾವ ಭಾವನೆಗಳ ತಾಕಲಾಟವೂ ಇರಲಿಲ್ಲ ಕಣೆ. ನನ್ನ ಹಠ ಗೊತ್ತಿತ್ತು ನಿನಗೆನನ್ನ ಸಿಟ್ಟು ದ್ವೇಷಗಳನ್ನು ಚೆನ್ನಾಗಿ ತಿಳಿದವಳು ನೀನು. ಮತ್ತೂ ಅದೇನೋ ತ್ಯಾಗ ಸಹನೆಕರುಣೆ ಅನ್ನೋ ಅಂಥಹ ಹೆಣ್ಣ್ ಸಹಜ ಗುಣಗಳ ಸರ್ವ ಸಂಪನ್ನೆಯಾಗಿದ್ದೆಯಲ್ಲ ನೀನು. ಅದಕ್ಕಾಗಿಯೆ ದೂರ ಹೋಗುವಾಗ ತ್ಯಾಗ ಎಂಬ ಶಬ್ದವನ್ನು ನಿನ್ನ ಸಮಾಧಾನಕ್ಕೆ ಇಟ್ಟುಕೊಂಡು ಹೊರಟೆಯಲ್ಲ. ನೀ ಮಾಡಿದ್ದು ತ್ಯಾಗವಲ್ಲ  ಕಣೆ ದಡ್ಡಿ ಅದು ಪಲಾಯನ. ನಿನ್ನ ಜಾಗದಲ್ಲಿ ನಾನಿದ್ದರೆ ಕಿತ್ತುಕೊಳ್ಳುತ್ತಿದ್ದೆ.

ಅತ್ತ  ಕಾಲೇಜ್ ಮುಗಿದ ಮೇಲೆ Rank Student  ಆದ ನಿನಗೆ ಒಳ್ಳೆಯ ಕೆಲಸವೇ ಸಿಕ್ಕಿತ್ತು. ಇತ್ತ ಸನ್ನು ಕೂಡ ಒಳ್ಳೆಯ ಕೆಲಸದಲ್ಲಿ ಸೆಟ್ಲ್ ಆಗಿದ್ದ.ಸನ್ನು ನಾನು ವಾರಕ್ಕೊಮ್ಮೆ ಸಿಗುತ್ತಿದ್ದೆವು. ಈ ಮದ್ಯೆ ಎಲ್ಲೋ ನನಗೆ ಸನ್ನು ಇಷ್ಟವಾಗ ತೊಡಗಿದ್ದ. ಅವನ ಕಣ್ಣುಗಳಲ್ಲಿ ಕಳೆದು ಹೋಗುವ ಭಯ ಕಾಡುತ್ತಿತ್ತು.ಅವನಿಗೆ ನಾನಾಗಿಯೇ ಸೋಲಲು ನನಗೆ ಇಷ್ಟವಿರಲಿಲ್ಲ. ದೇಹಿ ಎಂದು ನನ್ನೆಡೆಗೆ ಬರಲಿ ಎಂದುಕೊಳ್ಳುತ್ತಿದ್ದೆ. ಆದರೆ ಈಗಲೂ ಅವನ ಭಾವನೆಗಳಲ್ಲಿ ಯಾವ ಏರಿಳಿತಗಳೂ ಇರಲಿಲ್ಲ.  ಮನೆಯಲ್ಲೂ ಮದುವೆಯ ಮಾತುಕಥೆಗಳು ಜೋರಾಗಿಯೇ ಸಾಗುತ್ತಿದ್ದವು. ರಾಜಕಾರಣಿಯ ಮಗಳಿಗೆ ಸಂಬಂಧಗಳು ಬರುವುದೇನು ಕಡಿಮೆಯೇ ?   ಮನೆಯಿಂದಲೇ ಅವನ ಜೊತೆಗೆ ಮದುವೆಯ ಪ್ರಸ್ತಾಪ  ಬಂದಾಗ ನಿಜಕ್ಕೂ ಖುಷಿಯಾಗಿದ್ದೆ ಕಣೆ. ಆಗ ಬಂತು ನೋಡು ನಿನ್ನ ನೆನಪು. ಅವನಿಗೆ ಸೋತುನಿನ್ನ ತ್ಯಾಗಕ್ಕೆ ಬೆಲೆ ಕೊಡಲು ನನಗಿಷ್ಟವಿರಲಿಲ್ಲ. again  ಇಲ್ಲೂ ನನಗೆ ಸೋಲಲು ,ಸೋಲೋಪ್ಪಿಕ್ಕೊಳ್ಳಲು ಇಷ್ಟವಿರಲಿಲ್ಲ. ಅದಕ್ಕೆ ಅವನನ್ನು ಬೇಕಂತಲೇ ತಿರಸ್ಕರಿಸಿದೆ. ಕಾರಣವನ್ನು ನೇರವಾಗಿಯೇ ಹೇಳಿದೆ. ಅದಕ್ಕೆ " ನೀನು ಸಣ್ಣವಳಂತೆ ಆಡುತ್ತೀಯ ಅಂದೊಕೊಂಡಿದ್ದೆ ಆದರೆ ಇಷ್ಟೆಲ್ಲಾ ಸಣ್ಣತನಗಳು ಇದೆ ಎಂದು ಗೊತ್ತಿರಲಿಲ್ಲ ಎಂದು ದೂರ ಹೋದ. 

ಅವನು ಹೋದ ಮೇಲೆ ಒಂಟಿ ಎನಿಸಲಿಲ್ಲ. ಒಂಟಿತನ ನನ್ನ ಕಾಡಲಿಲ್ಲ. ಕಾಡುತ್ತಿರುವುದು ಪ್ರೀತಿ.  . ಸೋಲಲು ಇಷ್ಟವಿಲ್ಲವೆಂದವಳನ್ನು ಪ್ರೀತಿ ಸೋಲಿಸಿಬಿಟ್ಟಿದೆ. ಯಾವ ಭಾವಗಳಿಗೂ ಸಿಗದಂತೆ ಬದುಕುತ್ತಿದ್ದವಳ ಹೊಸ ಭಾವಗಳು ಸುತ್ತಿಕೊಳ್ಳುತ್ತಿವೆ. ಬಹುಶಃ ಇಂಥ ಮಧುರ ಅನುಭೂತಿಗಳೇ ಪ್ರೇಮಿಗಳನ್ನು ಖುಷಿಯಿಂದ ಇಡುತ್ತವೇನೋ. ನೆನಪುಗಳ ಭಾರವನ್ನು ಪ್ರೀತಿಯಲ್ಲಿ ಸೋತವರು ಮಾತ್ರ ಅರಿಯಬಲ್ಲರೆನೋ ಅಲ್ಲವಾ ?   ಚಿವುಟಿದಷ್ಟೂ ಚಿಗುರುತ್ತಾ ಹೆಣ್ತನವನ್ನು ಜಾಗೃತಗೊಳಿಸುತ್ತ ಜ್ವಾಲಾಮುಖಿಯಂತೆ ಒಳಗೊಳಗೇ ಕುದಿಯುತ್ತಿದೆ. ಉಹೂಂ ಸೋಲಲಾರೆ ನಾನು.  ಅವನು ಕೊಟ್ಟು ಹೋದ ಹೊಸ ರಾಗಗಳ ನುಡಿಸುವ  ಪ್ರೀತಿಯ  ಕೊಳಲನ್ನು ಮುರಿದು ನಿಶ್ಯಬ್ದದಲ್ಲಿ ಬದುಕಬೇಕಿದೆ.ಮುಖವಾಡ ಕಳಚಿ ಮಂಡಿಯೂರಲಾರೆ.  ಜ್ವಾಲೆಯ  ಕಾವು ನನ್ನೊಳಗೆ ಆರಿ ಅಗ್ನಿಶಿಲೆಯಾಗಿಬಿಡಲಿ..  

ಇಷ್ಟೆಲ್ಲಾ ಬರೆದವಳು ಕ್ಷಮೆ ಕೇಳುತ್ತೇನೆ ಎಂದುಕೊಳ್ಳಬೇಡ. ನನ್ನ ನೇರಕ್ಕೆ ನಾ ಮಾಡಿದ್ದೆಲ್ಲವೂ ಸರಿಯೇ. ನಿನಗೆ ಗೊತ್ತಲ್ಲ ನನಗೆ ಕ್ಷಮೆ ಕೇಳಿಯೂ ಗೊತ್ತಿಲ್ಲ. ಕ್ಷಮಿಸಿಯೂ ಗೊತ್ತಿಲ್ಲ.  
-ಪೂಫಿ....  
(ಇದು 19 ಮೇ 2013 ರ ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿತ್ತು )                               

Monday 13 May 2013

ನೀನಿರಬೇಕಿತ್ತು ..





ಮಿತ್ರ ದಿನೇಶ್ ಮನೀರ್ ತೆಗೆದ ಈ  ಫೋಟೊ ನೋಡಿ ಬರೆದ ಸಾಲುಗಳಿವು. ಅವರದೇ ವೆಬ್ಸೈಟ್ ನ ಚಿತ್ರ -ಕಾವ್ಯ ಸರಣಿಯಲ್ಲಿ ನನಗೊಂದು ಅವಕಾಶ ಸಿಕ್ಕಿತ್ತು. ನನ್ನ ಸಾಲುಗಳಿಗಿಂತಲೂ ಚಂದದ ಫೋಟೋ ಇಲ್ಲಿದೆ. ಒಮ್ಮೆ ನೋಡಿ ಬನ್ನಿ .

Thank you Dineshanna for this opportunity ... 


ಹೊಸ ಬೆಳಗಿನಲ್ಲಿ ... 
ಅಂಗಳದ ತುಂಬಾ 
ಹರಳು ಇಬ್ಬನಿಯ  
ರಂಗವಲ್ಲಿ ಮೂಡಿತ್ತು ...

ಎಳೆ ಬಿಸಿಲ ಉಂಗುರಗಳ 
ಜೊತೆಯಾಗಿ ನೀನಿರಬೇಕಿತ್ತು ..  

ಊರಂಚಿನ ಹಸಿರ ಮೇರೆಯೆಲ್ಲ 
ಆಗಸದ ಕೆಂಪಿನಲ್ಲಿ ಕರಗಿ 
ಕತ್ತಲ ಮಡಿಲಲ್ಲಿ  ಮಲಗುತಿರಲು 
ಬೀಸು ತಂಗಾಳಿಯಲ್ಲಿ 
ಹಿತವಾದ ಮೌನವಿತ್ತು 

 ಮೌನಕ್ಕೆ ಜೊತೆಯಾಗಿ 
 ಸಖ ನೀನಿರಬೇಕಿತ್ತು 
ಹೊಳೆಯಂಚಿನ ಹಾದಿಯಲ್ಲಿ 
ಸುಮ್ಮನೆ ನಡೆವಾಗ .. 
ಏಕಾಂಗಿ ಮನ ಜೊತೆಯಲ್ಲಿ 
ನಿನ್ನ ಕಲ್ಪಿಸಲು 
ಆಡುವ ಸಾವಿರ ಮಾತುಗಳಿತ್ತು .. 

ನನ್ನೊಲವ ಮಾತುಗಳ 
ಜೊತೆಯಾಗಿ ನೀನಿರಬೇಕಿತ್ತು .. 

ಪಾದ ತೋಯಿಸಿದ ಅಲೆಗಳು 

ಮರಳಿ ಬರುವುದರೊಳಗಾಗಿ ... 
ಹಸಿ ಮರಳ ಮೇಲೆ 
ಹೆಜ್ಜೆಗುರುತು ಮೂಡಿತ್ತು  .. 

ಜೋಡಿ ಹೆಜ್ಜೆಗಳಿಗೆ 
ಜೊತೆಯಾಗಿ ನೀನಿರಬೇಕಿತ್ತು...